ಕೊಂಕಣಿಯ ಪ್ರಖ್ಯಾತ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇವರ ಮಕ್ಕಳ ರಜೆ ಶಿಬಿರ ಜಾವಾದ್, ಎಪ್ರಿಲ್ 28 ರಂದು ಪ್ರಾರಂಭಗೊಂಡಿತು. ಅಮೇರಿಕಾದಲ್ಲಿ ನೆಲೆಸಿರುವ ಖ್ಯಾತ ಕೊಂಕಣಿ ಲೇಖಕ, ಪತ್ರಿಕೋದ್ಯಮಿ, ಸಮಾಜಸೇವಕ ಶ್ರಿಯುತ ಆಸ್ಟಿನ್ ಡಿಸೋಜ ಪ್ರಭು ಇವರು ಉದ್ಘಾಟಿಸಿದರು. ಅವರ ಸಂದೇಶದಲ್ಲಿ, ಮಕ್ಕಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಿಸಬೇಕು ಮತ್ತು ಕೊಂಕಣಿ ಭಾಷೆಯ ಏಳಿಗೆಗಾಗಿ ದುಡಿಯಬೇಕು ಎಂದು ಕರೆಕೊಟ್ಟರು. ಇನ್ನೋರ್ವ ಅಥಿತಿ ಖ್ಯಾತ ಸಮಾಜಸೇವಕ, ಕೇಂದ ್ರಅಲ್ಪಸಂಖ್ಯಾತ ಆಯೋಗದ ಸದಸ್ಯ ಶ್ರೀಯುತ ರೇಮಂಡ್ ಡಿಸೋಜ ದೆಹಲಿ, ತಮ್ಮ ಸಂದೇಶದಲ್ಲಿ ಈ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ದೇಶ-ವಿದೇಶಗಳಲ್ಲಿ ಪ್ರಜ್ವಲಿಸುತ್ತಿದ್ದಾರೆ. ಎ.ಆರ್. ರೆಹಮಾನ್‍ರವರಂತಹ ಖ್ಯಾತ ನಾಮರ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊರವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಕೊಂಕಣಿ ಕವಿ ಶ್ರೀ ರೊನಿ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ಈ 9 ದಿನಗಳ ವಸತಿ ಶಿಬಿರದಲ್ಲಿ ಕೊಂಕಣಿ ಗಾಯನ, ನೃತ್ಯ, ನಾಟಕ ಮತ್ತು ವಾದ್ಯ ಸಂಗೀತ, ವ್ಯಕ್ತಿತ್ವ ವಿಕಸನ, ಕಾರ್ಯನಿರ್ವಹಣೆ ಮತ್ತು ಕೊಂಕಣಿ (ಕೊಂಕಣಿ ಹಾಗೂ ರೋಮಿ ಲಿಪಿಗಳಲ್ಲಿ ಬರೆಯಲು) ಈ ವಿಷಯಗಳಲ್ಲಿ ವಿಶಿಷ್ಟ ತರಬೇತಿ ನೀಡಲಾಗುವುದು.


ಶಿಬಿರದ ಸಮರೋಪ ಕಾರ್ಯಕ್ರಮವು ಮೇ 06, 2018 , ಆದಿತ್ಯವಾರ ಸಂಜೆ 6.30ಕ್ಕೆ ಶಕ್ತಿನಗರದ ಕಲಾಂಗಣ್‍ನ್‍ಲ್ಲಿ ನಡೆಯುವುದು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಕೊಂಕಣಿ ಗಾಯನ, ನೃತ್ಯ ಮತ್ತು ನಾಟಕ – ‘ಆಮ್ಕಾ ಇಲ್ಲೆಂ ಆಯ್ಕಾ’ ಪ್ರದರ್ಶನಗೊಳ್ಳುವುದು.


ಪ್ರವೇಶ ಉಚಿತ. ಸರ್ವರಿಗೂ ಆದರದ ಸ್ವಾಗತ.