ಚಿತ್ರಕೃಪೆ : ವಿಕಾಸ್ ಕಲಾಕುಲ್.
ಜಪಾನಿನ ಯುಟ್ಸುನೋಮಿಯಾ ವಿಶ್ವವಿದ್ಯಾನಿಲಯದ (Utsunomiya) ವಿದ್ಯಾರ್ಥಿ ತಂಡವು ಸಂಸ್ಕೃತಿ ವೈವಿಧ್ಯತೆಯ ಬಗ್ಗೆ ಅರಿಯುವ ಸಲುವಾಗಿ ಭಾರತದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಕೊಂಕಣಿ ಭಾಷೆ-ಸಂಸ್ಕೃತಿಯ ಬಗ್ಗೆ ಅರಿಯಲು ಶಕ್ತಿನಗರದ ಕಲಾಂಗಣಕ್ಕೆ ಭೇಟಿ ನೀಡಿದರು.
ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಕೊಂಕಣಿಯ ಭಾಷೆ, ಕಲೆ, ಸಂಸ್ಕೃತಿಯ ವಿವಿಧತೆಗಳು, ವಿವಿಧ ಭಾಷಾ ಪ್ರಭೇದಗಳ ಬಗ್ಗೆ ಅರಿವನ್ನು ಹಂಚಿದರು. ಮಾಂಡ್ ಸೊಭಾಣ್ ನಡೆಸಿದ ವಿವಿಧ ಕಲಾ ಪ್ರಯೋಗಗಳು, ಗಿನ್ನೆಸ್ ದಾಖಲೆ, ತಿಂಗಳ ವೇದಿಕೆಯಂತಹ ನಿರಂತರ ಕಾರ್ಯಕ್ರಮಗಳು, ಬಯಲು ರಂಗ ಮಂದಿರ, ಆವರಣ ಗೋಡೆಗಳಲ್ಲಿನ ಉಬ್ಬು ಶಿಲ್ಪಗಳು, ಏಕತಾ ಗೋಡೆಯಲ್ಲಿನ ಶಿಲ್ಪಕಲಾ ಪ್ರತಿಮೆಗಳು, ಗುಮಟ್ ಹಾಡುಗಳ ಬಗ್ಗೆ ವಿವರಿಸಿದರು. ವಸ್ತು ಸಂಗ್ರಹಾಲಯದಲ್ಲಿರುವ ವಸ್ತು ವಿಶೇಷಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ವಿದ್ಯಾರ್ಥಿಗಳೊಡನೆ ಸಂವಾದ ನಡೆಯಿತು.
ರೋಶನಿ ನಿಲಯದ ವಿಭಾಗ ಮುಖ್ಯಸ್ಥರಾದ ಜೊಸ್ಲಿನ್ ಲೋಬೊ ಮಂಗಳೂರಿನಲ್ಲಿ ಮಾರ್ಗದರ್ಶಿಗಳಾಗಿದ್ದು, ಈ ಅಧ್ಯಯನ ತಂಡದಲ್ಲಿ ಯುವಿ, ಮಿಯೊ, ಕನಾಕೊ, ಕಾನ, ಅಝೂಸಾ, ಸೊನೊಮಿ (ವಿದ್ಯಾರ್ಥಿನಿಯರು), ಕಝೂಕಿ ಹಾಗೂ ಯೂಕಿ (ವಿದ್ಯಾರ್ಥಿಗಳು) ಇದ್ದರು. ಕ್ಯಾರಲ್ ಪಿಂಟೊ, ಸುನೀಲ್, ತೇಜಸ್ವಿನಿ ಹಾಗೂ ಮಾಂಡ್ ಸೊಭಾಣ್ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್ ಮತಾಯಸ್ ಉಪಸ್ಥಿತರಿದ್ದರು.
Comments powered by CComment